Tuesday, November 19, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೩

ಹೋದ ಫೊಸ್ಟ್‌ನಲ್ಲಿ ಪೂಜಾರಿ ಅಂತ ಪ್ರಸ್ತಾಪ ಮಾಡಿದ್ನಲ್ಲ ಅವರ ಕೃಪೆ ಅತ್ಯವಶ್ಯಕ. ಕಂಪನಿಯ ಎಂ.ಡಿ ನಿಮಗೆ ಕೆಲಸ ಕೊಡಲು ಸಿದ್ಧರಿದ್ದರೂ ಮಾನವ ಸಂಪನ್ಮೂಲ/ಮಾ.ಸಂ(ಹ್ಯೂಮನ್ ರೆಸೋರ್ಸ್) ಅಧಿಕಾರಿಗಳು  ಅಭ್ಯರ್ಥಿ ಕರೆ ಸ್ವೀಕರಿಸುತ್ತಿಲ್ಲಾ, ವೃತ್ತಿ ಜಾತಕವನ್ನು ಅಭ್ಯರ್ಥಿ ಕಳಿಸಿಲ್ಲ ಅಂತ ಎಂ.ಡಿಗೆ ಸುಳ್ಳು ಹೇಳಿದರೆ ಕೆಲಸ ಸಿಗಲು ಸಾಧ್ಯವೆ? ಒಂದು ಖಾಲಿ ಹುದ್ದೆಗೆ ಹೊರ ರಾಜ್ಯದ  ಮಾ.ಸಂ ಅಧಿಕಾರಿ ಬಳಿ ಒಬ್ಬ ಅರ್ಹ ಕನ್ನಡಿಗನ ಹಾಗು ಅವನ ಊರಿನವನ ಅರ್ಜಿ ಸಿಕ್ಕಿದರೆ ಯಾವ ವೃ.ಜಾವನ್ನು ಪರಿಗಣಿಸುತ್ತಾನೆ? ಇದರ ಉತ್ತರ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

          Integrity(ಸಮಗ್ರತೆ/ಪೂರ್ಣತೆ/ಎಲ್ಲರಲೂ ಸಮಾನತೆ ಕಾಣುವ ಮನೊಭಾವ) ಅನ್ನೋದು ಕೇವಲ ಕನ್ನಡಿಗ ಮಾ.ಸಂ ಅಧಿಕಾರಿಗಳ ಸ್ವತ್ತು ಆಗಿ ಕನ್ನಡಿಗರಿಗೆ ಕುತ್ತು ಆಗಿದೆ. ಯಾವ ರಾಜ್ಯದ ಮಾ.ಸಂ ಅಧಿಕಾರಿಗೂ ಇಲ್ಲದ ಅಥವಾ ಕನಿಷ್ಟ ಮಟ್ಟದಲ್ಲಿರುವ ಇಂಟೆಗ್ರಿಟಿ ಎನ್ನುವ ಗುಣ ವಂಶವಾಹಿನಿಯಲ್ಲಿರುವ ಹಾಗೆ ವರ್ತಿಸುವುದು ಅತೀವ ದುಖ:ಕರ ಸಂಗತಿ. ಮಾ.ಸಂ ಅಧಿಕಾರಿಗಳಿಗೆ ಅವರದೆ ಆದ ಚೌಕಟ್ಟು ಇರುತ್ತದೆ ಎಂಬುದು ಗೊತ್ತು ಆದರೆ ಅಂಥದ್ದೆ ಚೌಕಟ್ಟಿನಲ್ಲಿ ಹೊರ ರಾಜ್ಯದ  ಮಾ.ಸಂ ಅಧಿಕಾರಿಯೂ ಸಹ ಕೆಲಸ ಮಾಡುತಿರುತ್ತಾರೆ ಹೀಗಿದ್ದರು ಕನ್ನಡಿಗರು ಮಣ್ಣು ತಿನ್ನುತ್ತಾರೆ ಹೊರಗಿನವರು ಕೆಲಸ ಗಿಟ್ಟಿಸಿ ಬೀಗುತ್ತಾರೆ. ಇಂತಹ ಪರಿಸ್ಥಿತಿ ಬದಲಾಗಬೇಕೆಂದರೆ ಮಾ.ಸಂ ಅಧಿಕಾರಿಯೂ ಕನ್ನಡಿಗರ ಏಳ್ಗೆಗೆ ಕೈ ಜೋಡಿಸಬೇಕಾದ್ದು ಅತ್ಯವಶ್ಯಕ, ಬೆರಳೆಣಿಕೆಯ ಸಂಖ್ಯೆಯಲ್ಲಿ ಅವರು ಸಿದ್ಧರಿರುತ್ತಾರೆ ಆದರೆ ಮುಂದೆ ಬರುವುದಿಲ್ಲ ಯಾಕೆಂದರೆ ನಮ್ಮ ಕನ್ನಡಿಗರಲ್ಲಿ ನಿಸ್ಸ್ವಾರ್ಥ ಸೇವೆ ಮಾಡುವವರಿಗೆ ಮರ್ಯಾದೆ ಇಲ್ಲ!! ಒಮ್ಮೆ  ಡಿಪ್ಲೋಮ ಮಾಡಿದವರಿಗೆ ೫ ಖಾಲಿ ಹುದ್ದೆಯಿರುವ ವಿಚಾರ
ತಿಳಿಯಿತು ಸರಿ ಅಂತ ನಾನು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನ ಪಕ್ಕದಲ್ಲಿರುವ ಡಿಪ್ಲೋಮ ಕಾಲೇಜಿನ ಮಾ.ಸಂ ಅಧಿಕಾರಿಗೆ ಕರೆ ಮಾಡಿ ವಿಚಾರ ಚರ್ಚಿಸಿದೆ. ಆ ವ್ಯಕ್ತಿ ತಮ್ಮ ಕಾಲೇಜಿನ ವಿಧ್ಯಾರ್ಥಿಗಳ ಭವಿಷ್ಯ ಯೋಚಿಸುವುದು ಬಿಟ್ಟು ನನಗೆ ನಿಮಗೆ ಏನು ಲಾಭ? ನೀವು ಯಾಕೆ ಈ ಕೆಲಸ ಮಾಡುತ್ತಿದ್ದೀರಾ? ಅಂತ ಉಲ್ಟಾ ನನಗೆ ಪ್ರಶ್ನೆ ಹಾಕಿದರು, ರಸ್ತೆಯಲ್ಲಿ ಹೋಗುತ್ತಿರುವನನ್ನು ಕರೆದು ಕೆರದಲ್ಲಿ ಹೊಡೆಸಿಕೊಂಡ ಹಾಗೆ ಆಯ್ತು ನನಗೆ! ಹೀಗೆ ನಮ್ಮ ಕನ್ನಡಿಗರು.          
   
   ಕನ್ನಡಿಗರಿಗೆ ಸಹಾಯ ಮಾಡಲು ಮುಂದಾದ ನನ್ನ ಕೆಲವು ಮಾ.ಸಂ ಅಧಿಕಾರಿ ಸ್ನೇಹಿತರಿಗೂ ಈ ರೀತಿ ಅನುಭವವಾಗಿ ಅವರು ಬೇಸತ್ತಿದ್ದಾರೆ ಇದು ಬದಲಾಗಬೇಕಾದರೆ ನಮ್ಮ ವ್ಯಕ್ತಿತ್ವ ಬದಲಾಗಬೇಕಿದೆ.
ಎನಗಿಂತ ಕಿರಿಯರಿಲ್ಲ,
ಶಿವ ಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ
ಅನ್ನೋ ಮಟ್ಟಕ್ಕೆ ನಾವು humble ಆಗಬೇಕಿದೆ ನಾಟಕೀಯ ಅನ್ನೊ ಮಟ್ಟಕ್ಕೆ ಇಲ್ಲದಿದ್ದರು ಒಂದು ಲೆವೆಲ್‌ಗೆ ಇದು ಇರಬೇಕು, ಸಹಾಯ ಮಾಡಿದವರಿಗೆ ಋಣಿಯಾಗಬೇಕಿದೆ ಎಲ್ಲದಕ್ಕೂ ಮಿಗಿಲಾಗಿ professional(ವೃತ್ತಿ ಪರ) ಆಗಬೇಕಿದೆ . ವೃತ್ತಿಪರತೆಯಲ್ಲಿ ಸಾವಿರ ಗುಣ ಸೇರಿಸಬಹುದು ಆದರೆ ಇಲ್ಲಿ ಸದ್ಯಕ್ಕೆ ನಮ್ಮ ವೃತ್ತಿ ಜೀವನ ಶುರು ಮಾಡಲು/ಸುಧಾರಿಸಲು ಇರಬೇಕಾದ ಕನಿಷ್ಟ ಅರ್ಹತೆ ತಿಳಿಯೋಣ.

Humbleness ಕೇವಲ ಡಾಂಭಿಕತೆ ಇದ್ದರೆ ದೇವ್ರಾಣೆಗು ಕ್ಷಣಿಕ ಕಾರ್ಯ ಆಗಬಹುದು ಧೀರ್ಘ್ಹ ಕಾಲದಲ್ಲಿ ನಿಮಗೆ ಮುಳುವಾಗುತ್ತೆ,

Focus ಏಕಾಗ್ರತೆಯಿಂದ ನಾವು ಒಂದು ಸಮಯದಲ್ಲಿ ಒಂದೆ ಗುರಿ ಇಟ್ಟುಕೊಂಡು ಅದನ್ನು ತಲುಪಲು ಶ್ರಮವಹಿಸಬೇಕು. ಎರಡು ದೋಣಿಯಲ್ಲಿ ಕಾಲಿಟ್ಟು ಮುಂದೆ ಸಾಗುತ್ತೇನೆ ಎಂದರೆ ಸಾಧ್ಯವೆ? ಹಾಗೆಯೆ ಒಂದು ಖಾಲಿ ಹುದ್ದೆಗೆ ಅದಕ್ಕೆ
ಸೂಕ್ತವಾದ ವೃ.ಜಾ ಮಾಡಿ ಅರ್ಜಿ ಸಲ್ಲಿಸಬೇಕು ಆಗಲೆ hit rate ಜಾಸ್ತಿ ಇರುತ್ತದೆ .

Discipline ಶಿಸ್ತು ಇಲ್ಲದೆ ಹೋದರೆ ಯಾವ ಕಾರ್ಯವು ಯಾವ ಕಾಲದಲ್ಲೂ ಆಗಲು ಸಾಧ್ಯವಿಲ್ಲ,

Honesty ಇದು ಒಂದು ಮಟ್ಟಕ್ಕೆ ಇರಬೇಕು ಯಾಕಂದರೆ  ನಿಯತ್ತು ಅನ್ನೋದು ಐಟಿ ಇಂಡುಸ್ಟ್ರಿ ಅಲ್ಲಿ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ. ನೀವು ಮಾಡಿಲ್ಲದ ಪ್ರಾಜೆಕ್ಟ್ ಹಾಕಿಕೊಂಡಿದ್ದರು ಪರವಾಗಿಲ್ಲ ಅದು ಇಂಟರ್ವ್ಯೂವ್ ಮಾಡುವವರಿಗೆ ಗೊತ್ತಾದರು ತಲೆ ಕೆಡಿಸಿಕೊಳಲ್ಲಾ ಆದರೆ ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟು ಪರಿಸ್ಥಿತಿ ನಿಭಾಯಿಸಲೇಬೇಕು. ಸುಮ್ಮನ್ನೆ ಮನಸಿಗ್ಗೆ ಅನಿಸಿದ್ದೆಲ್ಲ ಕಂಡವರು ಮಾಡಿದ್ದೆಲ್ಲಾ ನಾನೆ ಮಾಡಿದೆ ಅಂತ ಅರಗಿಸಿಕೊಳ್ಳದ ಮಟ್ಟಿಗೆ ಸುಳ್ಳು ಹೇಳಿದರೆ ಎಂತಹವರು ಒಪ್ಪುವುದಿಲ್ಲ. ಅದೆ ರೀತಿಯಾಗಿ ಸುಳ್ಳು ಅನುಭವದ ಪತ್ರ ಮಾಡಿಸಿ ಕೆಲಸ ಗಿಟ್ಟಿಸಿದರೆ ಯಾವ ದಿನ ಯಾವ ಕ್ಷಣ ನಿಮ್ಮ ಕಿತ್ತು ಹಾಕುತ್ತಾರೆ ಎನ್ನುವ ಖಾತ್ರಿ ಇರುವುದಿಲ್ಲ. ನೀವು ಸಂಸ್ಠೆಗೆ ಎಷ್ಟೆ ಬೇಕಿದ್ದರು ಯಾರು ತಲೆಕೆಡಿಸಿಕೊಳಲ್ಲ ಹಾಗಾಗಿ ಇಂಥ ಕೆಲಸ ಮಾಡಬೇಡಿರಿ ಸಣ್ಣದಾಗಿ ಆರಂಭವಾದ ನಿಮ್ಮ ವೃತ್ತಿ ಜೀವನ ಶಾಶ್ವತವಾಗಿ ಕೊನೆಗೊಳ್ಳಬಹುದು.

Dedication ಛಲ ಇಲ್ಲದೆ ಹೋದರೆ ಎಂಥಹ ಸಣ್ಣ ಕೆಲಸವು ಬೆಟ್ಟದ ಹಾಗೆ ಕಾಣುತ್ತದೆ. only when you can imagine the end, you can begin!! ಹಿರಿಯರಿಂದ/ಹಿತೈಷಿಗಳಿಂದ ಹರಸಿಕೊಳ್ಳುವ ನಮ್ಮ ಸಂಸ್ಕೃತಿಯು ಹಿಂದೆ ಅಡಗಿರುವ ಸತ್ಯವು ಇದೆ ಅಲ್ಲವೆ? ನೂರ್‌ಕಾಲ ಚೆನ್ನಾಗಿ ಬಾಳಿರಿ ಎಂದು ಹರಸಿದಿರೆ ಮೂರು ಕಾಲ ಹಾಗೆ ಬದುಕಿದರು ನೂರು ಕಾಲ ಬದುಕಿದಂತಲ್ಲವೆ? ನಮ್ಮ ಮನಸ್ಸಿನೊಳಗೆ ಚೆನ್ನಾಗಿ ಬಾಳುವುದು - ಮುಂದೆಂದೊ ಆಗಬೇಕಾಗಿರುವುದನ್ನು  ಊಹಿಸಿ ಅದರ ಸುತ್ತ ಚಿತ್ರಣ ಕಟ್ಟಿಕೊಳ್ಳುತ್ತೇವೆ ಅಲ್ಲವೆ? ಆ ಚಿತ್ರಣವೆ ನಾವು ಚೆನ್ನಾಗಿ ಬಾಳಲು ನಮ್ಮನ್ನು ಎಂತಹ ಕಷ್ಟ ಕಾಲದಲ್ಲು ಪ್ರೆರೇಪಿಸುತ್ತದೆಲ್ಲವೆ ಹಾಗೆಯೆ ಕೆಲಸ ಗಿಟ್ಟಿಸಲು ಮಾಡಬೇಕಾದ ಘಟ್ಟಗಳನ್ನು ಊಹಿಸಿ/ತಿಳಿದು ಅದಕ್ಕೆ ತಕ್ಕನಾಗಿ ಪರಿಶ್ರಮವಹಿಸಬೇಕು, ಸೋಲುಗಳಿಗೆ ಕುಗ್ಗ ಬಾರದು.

Cunningness (ಕತ್ತು ಕುಯ್ಯೊ cunningness ಅಲ್ಲ ಹೊಂಚು ಹಾಕಿ ನಮ್ಮ ಕೆಲಸ ಮುಗಿಸುವರಂತಹ ಸಮಯ ಸಾಧಕತೆ, ರಾಮ ವಾಲಿಯನ್ನು ನೇರವಾಗಿ ಎದುರಿಸದೆ ಹಿಂದಿನಿಂದ ಸಾಯಿಸಲಿಕ್ಕು ಸಹ ಒಪ್ಪುವಂತಹ ಕಾರಣಗಳಿವೆ, ಇದು ಸಹ ಸಮಯ ಸಾಧಕತೆಯ ಉದಾಹರಣೆ) ನಿಮ್ಮ ವೃ.ಜಾ ಸರಿಯಾದ ಸಮಯಕ್ಕೆ ಸರಿಯಾದ ಸ್ಠಳದಲ್ಲಿ ಇರಬೇಕೋ ಅದಕ್ಕೆ ನಿಮ್ಮ ಹಿತ ಬಯಸುವವರು ಶ್ರಮ ವಹಿಸಬೇಕಾಗುತ್ತದೆ. ಆ insider story ನೀವು ಪಡೆಯಬೇಕು, ಯಾರಿಗು ಸುಲಭವಾಗಿ ತಿಳಿಯಲಾಗದ ವಿಚಾರಗಳನ್ನು ನೀವು ಕಂಪನಿಯೊಳಗಿನವರಿಂದ ಸಂಪಾದಿಸಬೇಕು.

Opportunistic ಅವಕಾಶವಾದಿಯಾಗಬೇಕು, ಸಿಮ್‌ಪಲ್ ಆಗಿ ಒಂದ್ ಲವ್ ಸ್ಟೊರಿಲಿ ಡೈಲಾಗ್ ಇದೆಯಲ್ಲ "ಸಿಕ್ಕ ಅವಕಾಶಾನ ಸಂಪೂರ್ಣವಾಗಿ ಉಪಯೋಗಿಸ್ಕೊಬೇಕು" ಅಂತ ಆ ರೀತಿ ಜಾಣ್ಮೆಯಿಂದ ವರ್ತಿಸಬೇಕು, ಕೆಲಸ ಹುಡುಕುವಾಗ ಅಥವಾ ಎಲ್ಲಕ್ಕೂ ಮೂಲ ಇತರರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಬೇಕಿದೆ. ಈಗಿನ ಕಾಲದಲ್ಲಿ ಒಳ್ಳೆಯವರು ಸಿಗುವವರೆ ವಿರಳ ಅಂಥಾದ್ರಲ್ಲಿ ಆಪತ್ತಿಗಾದವೆನೆ ಆಪತ್ಭಾಂದವರಂತೆ ಸಹಾಯ ಮಾಡುವವರ ಗೆಳೆತನ/ಪರಿಚಯ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ?  ನಾಟಕೀಯ ಉಳಿಯುವುದಿಲ್ಲ ನಾವೆಲ್ಲಾ ಕನ್ನಡಿಗರು ಅನ್ನುವ ಒಗ್ಗಟ್ಟಿನ ಭಾವನೆ ನಮ್ಮ ಮನಸ್ಸಿನಲ್ಲಿದರೆ ಮಾತ್ರ ಸಂಬಂಧಗಳು ಹುಟ್ಟುತ್ತವೆ / ಉಳಿಯುತ್ತವೆ / ಬೆಳೆಯುತ್ತವೆ. ಕುವೆಂಪು ಹೇಳಿದಂತೆ "ಆಗು ಆಗು ನೀ ವಿಶ್ವ ಮಾನವನಾಗು" ಅನ್ನುವ ಮಾತನ್ನು ಕನಸ್ಸು ಮನಸ್ಸಿನಲ್ಲು ಪ್ರತಿಪಾದಿಸುವುದಿಲ್ಲ, ಆ ಮಾತನ್ನು ಮನಸ್ಸಿಗೆ ಹಚ್ಚಿಕೊಂಡ ಕನ್ನಡಿಗರು, ಕನ್ನಡಿಗರು, ಯೆನ್ನಡಿಗರು ಎಂಬ ಭಾವನೆ ಇಲ್ಲದೆ ಎಲ್ಲರಿಗು ಅವಕಾಶ ಮಾಡಿಕೊಟ್ಟು ಕೊನೆಗೆ ಎತ್ತರಕ್ಕೆ ಬೆಳೆದ ಯೆನ್ನಡಿಗರು ಕನ್ನಡಿಗರ ಬುಡಕ್ಕೆ ಕೊಡಲಿ ಇಟ್ಟು ಇಂದಿಗೆ ನಮ್ಮ ರಾಜ್ಯದಲ್ಲೆ, ರಾಜಧಾನಿಯಲ್ಲೆ ಕನ್ನಡಿಗರು ಕೆಲಸಕ್ಕೆ ಆಯ್ದುಕೊಂಡು ತಿನ್ನುವರಂತೆ
ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲ ನಮಗೆ ಬೇಕಾ??
                ಕಂಪನಿಗಳ ಮಾ.ಸಂ ಅಧಿಕಾರಿಗಳ/ಉನ್ನತ ಹುದ್ದೆಯಲ್ಲಿರುವವರ ಸಂಪರ್ಕಕ್ಕೆ ಸಿಗಬೇಕಾಗಿದೆ ಅವರು ಯಾಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ? ನೀವೆ ಅವರ ಬಳಿಗೆ ಹೋಗಬೇಕಿದೆ.ಸಹಾಯ ಯಾಚಿಸಬೇಕಿದೆ, ಕೈ ಚಾಚಿ ಬೇಡ ಬೇಕಿದೆ ವಿನಮ್ರತೆ ಇದ್ದಲ್ಲಿ ನಿಮಗೆ ಈ ಮಾತುಗಳು ಕಠೋರ ಎನಿಸುವುದಿಲ್ಲ ಅದೆ ಅಹಂಕಾರದಲ್ಲಿ ಮೆರೆಯುತ್ತಿದ್ದರೆ ನಾನೇಕೆ ಬೇರೆಯವರ ಮುಂದೆ ಕೈಯೊಡ್ಡಬೇಕು ಎಂಬ ಯೋಚನೆ ಬರದೆ ಇರಲಾರದು. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಮನೋಭಾವದ ಮೇಲಿದೆ.

                  ಟೈಂಪಾಸ್ ಮಾಡಲು/ಸ್ನೇಹ ಸಂಪಾದಿಸುವುದಕ್ಕೆ ಆನ್‌ಲೈನ್ ಏನೆಲ್ಲಾ ಮಾಡುತ್ತೀರಾ? ಮೊಬೈಲ್ ಅಲ್ಲೂ ಸಹ ಬಿಡದೆ ಫೇಸ್‌ಬುಕ್‌‍ಗೆ ಲಗ್ಗೆ ಹಾಕುವ ಜನರಿದ್ದಾರೆ. ಸಾಮಾನ್ಯವಾಗಿ ಒಂದು ಹುಡುಗಿ "ಇವತ್ತು ನಾನು ಬೆಳಗ್ಗೆ ಎದ್ದ ತಕ್ಷಣ ಸೀನಿದೆ " ಎಂದು ಪೋಸ್ತ್ ಮಾಡಿದರೆ ಅದನ್ನು ೧೦೦ ಜನ ಲೈಕ್ ಮಾಡುವವರಿದ್ದಾರೆ. ಈ ವಿಚಾರದ ಮೇಲೆಯೆ ದಿನ ಪೂರ್ತಿ ಚರ್ಚೆಯೆ ನಡೆದುಬಿಡುತ್ತದೆ!! ಅದು ತಪ್ಪಲ್ಲ ಅದರಿಂದ ತಿಳಿಯಬೇಕಾದದ್ದು ಟೈಂಪಾಸ್ ಮಾಡಲು/ಸ್ನೇಹಿತರೊಂದಿಗೆ ವಿಚಾರ ಹಂಚಿಕೊಳ್ಳುವ ಆತುರತೆ ತೋರಿಸುತ್ತದೆ. ಎಡೆಬಿಡದೆ ಆ ಪೋಸ್ಟ್ ನಲ್ಲಿ ಕಾಮೆಂಟ್ ಮಾಡುವುದು ಅವರ dedication ತೋರುತ್ತದೆ, ಹುಡುಗಿ/ಹುಡುಗನನ್ನು ಆರೊಗ್ಯ ವಿಚಾರಿಸುವ humbleness ಸಹ ಇರುತ್ತದೆ, opportunistic ಆಗಿ ಅವಳ/ಅವನ ಮನದ ಕೇಂದ್ರ ಬಿಂದುವಾಗುವ ಆತುರತೆಯಲ್ಲಿ ಮಾತಾನಾಡುವ ಅವಕಾಶವನ್ನು ಕಳೆದುಕೊಳ್ಳಬಾರದೆಂಬ ವಿಚಾರವಿಟ್ಟುಕೊಂಡು ನಡೆದುಕೊಳ್ಳುತ್ತಾರೆ. ಇಷ್ಟೆಲ್ಲ ಮಾಡಿದರೇನೆ ಫೇಸ್‌ಬುಕ್ ಅಲ್ಲಿ ಆನ್‌ಲೈನ್ ಸ್ನೇಹ ಉಳಿಯುವುದು.

ಮೊದಲು ಒಂದು ಐಡಿ ಸೃಷ್ಟಿಸ್ತೀರಾ, ನಂತರ ನಿಮ್ಮ ಬಗ್ಗೆ ತಿಳಿಸುವ ಕೇವಲ ಒಳ್ಳೆಯ ಗುಣಗಳನ್ನೆ ತುಂಬಿಸುತ್ತೀರ :). ಹುಟ್ಟಿದ ದಿನ, ಸಮಯ, ಸ್ಥಳ ಯಾವುದನ್ನು ಬಿಡದೆ ಸದ್ಯದವರೆಗಿನ ಎಲ್ಲಾ ಮಾಹಿತಿಯನ್ನು ತುಂಬುತ್ತೀರಾ.. ಆಮೇಲೆ ಪ್ರೊಫೈಲ್ ಹುಡುಕುತ್ತೀರಾ, ಸ್ನೇಹಿತರ ಸ್ನೇಹಿತರನ್ನು ಸ್ನೇಹಕ್ಕಾಗಿ ಕೈ ಚಾಚುತ್ತೀರಾ "ಅನ್ ಎ ಕ್ಲಿಕ್ ಆಫ್ ಬಟನ್". ಕಾಮನ್ ಫ್ರೆಂಡ್ಸ್ ಇದ್ದಾಗಲೆ ಸ್ನೇಹದ ಆಹ್ವಾನವನ್ನು ಸ್ವೀಕರಿಸುವುದು ಸುಲಭ ಆಗುತ್ತದೆ ಯಾಕೆಂದರೆ ನಿಮ್ಮನ್ನು ನಿಮ್ಮ ಫ್ರೆಂಡ್ refer ಮಾಡಿದಂತೆಯೆ ಅರ್ಥ. ನಿಮ್ಮ ನಂಬಿಕೆಯ ಮೇಲೆ ನಿಮ್ಮ ಸ್ನೇಹಿತರ ಆಹ್ವಾನ ಸ್ವೀಕರಿಸುತ್ತಾರೆ. ಫೇಸ್‌ಬುಕ್ ಐಡಿ ಕ್ರೀಯೇಟ್ ಆಗಿ ಸಣ್ಣದ ಸ್ನೇಹಿತರ ಗುಂಪು ಆಗಿದ್ದೆ ತಡ ಫೇಸ್‌ಬುಕ್ ಪೂರ್ತಿ ಕಾಮೆಂಟ್, ಪೋಸ್ಟ್‌ಗಳ ಧೂಳೊ ಧೂಳು.

               ಕೇವಲ ಟೈಮ್ ಪಾಸ್‌ನ ಒಂದು ಕಾನ್ಸೆಪ್ಟ್‌ಗೇನೆ ಇಷ್ಟು ಹರಸಾಹಸ ಮಾಡುವಾಗ ನಮ್ಮ ವೃತ್ತಿ ಜೀವನ ಚೆನ್ನಾಗಿರಲು ಏನೆಲ್ಲಾ ಮಾಡಬೇಕಾಗಬಹುದು ಎನ್ನುವುದು ಊಹೆಗೆ ನಿಲುಕದ ವಿಚಾರ. ಹೀಗಿರುವಾಗ ವೃತ್ತಿ ಜೀವನದಲ್ಲಿ ವೃತ್ತಿಪರರ ಪರಿಚಯ ಸ್ನೇಹಗಳಿಸಲು ಎಲ್ಲಿಗೆ ಹೊಗ್ತೀರಾ?

          ಇದಕ್ಕೆ ಉತ್ತರವಾಗಿಯೆ www.linkedin.com ಎನ್ನುವ ವೆಬ್ ತಾಣ ಇರುವುದು. ಇಲ್ಲಿ ನಿಮಗೆ ಉನ್ನತ ಹುದ್ದೆಯಲ್ಲಿರುವವರು, ನಿಮ್ಮ  ಉದ್ಯಮಕ್ಕೆ ಸೇರಿದ ವೃತ್ತಿಪರರು ಹಾಗು ನೀವು ಬಯಸುವ ಉದ್ಯಮದ ವೃತ್ತಿಪರರು ಸದಸ್ಯರಾಗಿರುವ ವೆಬ್ ತಾಣ. ಇದನ್ನು ನೀವು ಸ್ನೇಹಕ್ಕಾಗಿ, ಉದ್ಯೋಗಕ್ಕಾಗಿ ಅಥವಾ ವ್ಯವಾಹಾರಕ್ಕಾಗಲಿ ಉಪಯೋಗಿಸಬಹುದು.

          ಫೇಸ್ ಬುಕ್‌ನಂತೆಯೆ ಇಲ್ಲಿಯು ಸಹ ನಿಮಗೆ ಚರ್ಚೆ ಮಾಡಲು ವೇದಿಕೆ, ನಿಮ್ಮ ಅನಿಸಿಕೆ ಸ್ನೇಹಿತರೊಂದಿಗೆ ಹಂಚಿಕೊಳ್ಳಲು  ಕಾಮೆಂಟ್ ವಿಂಡೊ ಎಲ್ಲವೂ ಲಭ್ಯ.ಲಿಂಕ್ಡ್‌ಇನ್.ಕಾಂ ಉದ್ದೇಶ ವೃತ್ತಿಪರರು ಸಂಪರ್ಕದಲ್ಲಿರಲು ಅನುಕೂಲರಕರ ಜಾಲವನ್ನು ಸೃಷ್ಟಿಸುವುದು. ಚಾಕುವನ್ನು ತರಕಾರಿ ಕೊಯ್ಯಲು ಉಪಯೋಗಿಸಬಹುದು ಹಾಗೆಯೆ ಕೊಲೆ ಮಾಡಲು ಉಪಯೋಗಿಸಬಹುದು. ಲಿಂಕ್ಡ್‌ಇನ್.ಕಾಂ ಸಹ ಇದೆ ರೀತಿಯ ಅವಕಾಶ ಒದಗಿಸುತ್ತದೆ, ಅದನ್ನು ಉಪಯೋಗಿಸಿ
ನೀವು ವೃತ್ತಿಪರರ ಸ್ನೇಹ ಸಂಪಾದಿಸುತ್ತೀರೊ, ಉಪಯೋಗಿಸದೆಯೂ ಇರ್ತೀರೊ ಅಥವಾ ಟೈಂಪಾಸ್ ಮಾಡುತ್ತೀರೋ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.

ಮೇಲಾಗಿ www.linkedin.com ಅನ್ನು ಸಹ ಎಂಪ್ಲಾಯರ್‌ಗಳು, ವಿವಿಧ ಕಂಪನಿಯ ಮಾ.ಸಂ ಅಧಿಕಾರಿಗಳು ನಿಮ್ಮ ಪ್ರೊಫೈಲ್‌ಅನ್ನು ಲಿಂಕ್ಡ್‌ಇನ್.ಕಾಂ ಅಲ್ಲಿ ನಿಮ್ಮ ಬಗ್ಗೆ ಹೆಚ್ಚು ತಿಳಿಯುವ ಸಲುವಾಗಿ ಹುಡುಕುವ ಪ್ರವೃತ್ತಿ ಶುರು ಆಗಿದೆ. ಹಾಗಾಗಿ ಸಾಮಾಜಿಕವಾಗಿ ನೀವು ಯಾವ ರೀತಿ ಇರುತ್ತೀರಿ, ವಿಷಯ ಹಂಚಿಕೊಳ್ಳುತ್ತೀರಿ ಎಂದು ನಿಮ್ಮ ಚಟುವಟಿಕೆಗಳು ಮಾನಿಟರ್ ಆಗುವ ಸಂಭವ ಇದೆ.
ಹಾಗಾಗಿ ನಿಮ್ಮ ಪ್ರೊಫೈಲ್ ಅಚ್ಚುಕಟ್ಟಾಗಿರಲಿ, ಸಂಪೂರ್ಣವಾಗಿರಲಿ, ಮಾಹಿತಿ ಪೂರ್ಣವಾಗಿರಲಿ. ಕಂಪನಿಯಲ್ಲಿ ಹೇಗೆ ವೃತ್ತಿಪರರಂತೆ ಇರುತ್ತೀರೊ ಹಾಗೆಯೆ ಈ ತಾಣದಲ್ಲಿ ನಿಮ್ಮ ವೃತ್ತಿಪರತೆ ಪ್ರದರ್ಶಿಸಿರಿ.
   
             ಕನ್ನಡಿಗರ ಒಳಿತಿಗೆ ಅಂತಾನೆ ಇರುವ ಹಲವಾರು ಗೂಗಲ್ ಗ್ರೂಪ್‌ಗಳು, ಯಾಹೂ ಗ್ರೂಪ್‌ಗಳು, ಫೇಸ್ ಬುಕ್‌ನಲ್ಲಿ ಕನ್ನಡಿಗರ ಪರ ಗುಂಪುಗಳಿರುವ ಹಾಗೆ ಲಿಂಕ್ಡ್‌ಇನ್.ಕಾಂನಲ್ಲಿಯು ಸಹ ಕನ್ನಡಿಗರಿಗೆ ವೃತ್ತಿ ಪರರ ಮಾರ್ಗದರ್ಶನ, ಕನ್ನಡಿಗರಿಗೆ ಕೆಲಸದ ಅವಕಾಶಗಳ ಸುದ್ದಿ ತಲುಪಿಸುವ, ಕನ್ನಡಿಗರಿಗೆ ಸಂಬಂಧಿಸಿದಂತೆ ಚರ್ಚೆಯ ಸಲುವಾಗಿ IT_KANNADIGARU ಅಂತ ಗ್ರೂಪ್‌ ಇದೆ.

ಒಂದು ಗುಂಪಿನಲ್ಲಿ ಪ್ರಾಬ್ಲಂ ಶುರು ಆಗೊದು ಎಲ್ಲರು "ಪಡೆಯಬೇಕು" ಅಂತಲೆ ಇದ್ದಾಗ, "ಕೊಡಬೇಕು" ಅನ್ನೊದು ವಿರಳವಾದಾಗ. ನೀವು IT_KANNADIGARU ಗುಂಪಿನ ಸದಸ್ಯರಾಗಿ, ವೃತ್ತಿಪರರಾಗಿ ಇತರರಿಂದ ಪಡೆದು, ಇತರರಿಗೆ ಮಾರ್ಗದರ್ಶಕರಾದಾಗಲೆ ಕನ್ನಡಿಗರ ಗುಂಪಿಗೆ ಸಾರ್ಥಕತೆ ಸಿಗುವುದು.

ಕೊನೆಯ ಸಾಧನವೆ  "ಆನ್ ಲೈನ್ ಅಲ್ಲಿರುವ ಕನ್ನಡಿಗರ ಗುಂಪುಗಳು" ಅದರಲ್ಲಿ www.linkedin.com ಎಂಬ ಜಾಲತಾಣದಲ್ಲಿರುವ IT_KANNADIGARU ಕನ್ನಡಿಗರ ಗುಂಪು .  

ಗುಂಪಿಗೆ ಸೇರಲು ಈ ಕೊಂಡಿಯನ್ನು ಕ್ಲಿಕ್ ಮಾಡಿ http://www.linkedin.com/groups?jobs=&gid=2276827

ಇಲ್ಲಿಯವರೆಗೆ ವಿವರವಾಗಿ ಚರ್ಚಿಸಿದ ನಾಲ್ಕು ಸಾಧನಗಳು ನಮ್ಮ ಸಾಮಾನ್ಯ ಕನ್ನಡಿಗನಿಗೆ ಕೆಲಸ ಸಿಗಲು ಅತೀ ಅಗತ್ಯ. ತುಕ್ಕು ಹಿಡಿದಿರೊ ಕತ್ತಿಯಿಂದ ಯುದ್ಧ ಗೆಲ್ಲೊಕ್ಕೆ ಆಗುತ್ತಾ? ಹಾಗೆಯೆ ಇಲ್ಲಿ ತಿಳಿಸಿದ ಸಾಧನಗಳು ನಿಮ್ಮ ಬಳಿ ಇದ್ದು ಇಲ್ಲದ ಇರುವ ಹಾಗೆ ಇರಬಾರದು ಪಳ ಪಳ ಎನ್ನುವ ಕತ್ತಿಯ ಅಂಚಿನಂತೆ ಮೊನಚಾಗಿರಬೇಕು, ಅವಕಾಶ ಸಿಕ್ಕಾಗ ಎಗರಿ ಹೊಡೆದರೆ ಎದುರಾಳಿಯ ತಲೆ ಉರುಳಿ ನಿಮ್ಮ ಕಾಲ ಬಳಿ ಬೀಳುವ ಹಾಗೆ ಅಷ್ಟೆ aggressive ಆಗಿ, ನೀವಿಷ್ಟ ಪಟ್ಟ ಕೆಲಸಕ್ಕೆ ನಾಲ್ಕು ಸಾಧನಗಳನ್ನು ಉಪಯೋಗಿಸಿ ಛಲಬಿಡದೆ ಪ್ರಯತ್ನಿಸಿದರೆ ಅದು ತಪ್ಪದೆ ನಿಮ್ಮದಾಗುತ್ತದೆ. sureshot  ಕೆಲಸಕ್ಕಾಗಿ ತಿಳಿಸಿದ ನಾಲ್ಕು ಸಾಧನಗಳನ್ನು ನಿಮ್ಮದಾಗಿಸಿಕೊಳ್ಳಿ, ಕೆಲಸ ಸಿಗುವುದು ಖಂಡಿತ ಹಾಗು ಸುಲಭ.                

ಒಳ್ಳೆಯದಾಗಲಿ..
--ಪ್ರಸಾದ್

Tuesday, November 12, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೨

ನೀವು ವಿನಮ್ರ ಭಾವದ ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಷ್ಟಕ್ಕೆ ನಿಮ್ಮ ಅವಕಾಶಗಳು ಹೆಚ್ಚಾಗಬಹುದೆ ಹೊರತು ಕೆಲಸದ ಖಾತ್ರಿ ಆಗುವುದಕ್ಕೆ ಸಾಧ್ಯವಿಲ್ಲ.
ನೀವು ಯಾವುದಾದರು ಕಂಪ್ಯೂಟರ್ ಕೋರ್ಸ್ ಮಾಡುವ ಮುನ್ನ ಜಾಬ್ ಅಸ್ಸಿಸ್ಟೆನ್ಸ್ ಇರುವುದನ್ನೋ ಅಥವಾ ಜಾಬ್ ಗ್ಯಾರಂಟೀ ಹೇಳುವಂತಹ ಸಂಸ್ಥೆ ಆಯ್ಕೆ ಮಾಡಿಕೊಳ್ಳುತ್ತೀರೊ?  ಖಂಡಿತವಾಗಿಯು ಜಾಬ್ ಗ್ಯಾರಂಟೀ ಕೊಡುವ ಸಂಸ್ಥೆಯನ್ನೆ ಜಾಣರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಯಾವ ಜಾಣ ಸಂಸ್ಥೆಯು ಜಾಬ್ ಗ್ಯಾರಂಟೀ ಭರವಸೆ ಕೊಡುವುದೆ ಇಲ್ಲ. ಅವರು ಹೇಳುವುದಿಷ್ಟೆ ನಿಮಗೆ ನಾವು ಎಲ್ಲವನ್ನು ಹೇಳಿಕೊಡುತ್ತೇವೆ, ಕೆಲಸ ಸಿಗಲು ಸಹಾಯ ಮಾಡುತ್ತೇವೆ (ಜಾಬ್ ಅಸ್ಸಿಸ್ಟೆನ್ಸ್) ಹೊರತು ಕೆಲಸ ಕೊಡಿಸುವ (ಜಾಬ್ ಗ್ಯಾರಂಟೀ) ಭರವಸೆ ಕೊಡುವುದಿಲ್ಲ ಅಂತ ಹೀಗಿದ್ದ ಮೇಲೆ ನಿಮಗೆ ಕೆಲಸ ಸಿಗಲು ನಿಮ್ಮ ಪ್ರಯತ್ನವೆ ಮುಖ್ಯ ಎಂದಾಯಿತಲ್ಲವೆ?
   ಯಾವನಿಗೊ ಸಾವಿರಾರು ರುಪಾಯಿ ಕೊಟ್ಟು ಮತ್ತೆ ಬೀದಿಗೆ ಬಂದರೆ ಪ್ರಯೋಜನವೇನು? ಕೊಟ್ಟವನು ಕೋಡಂಗಿ ಈಸ್ಕೊಂಡೋನು ಈರಭದ್ರ ಎನ್ನುವ ಹಾಗೆ ಆಗಬಾರದು. ಹಾಗೆಂದ ಮಾತ್ರಕ್ಕೆ ಅವರು ಹೇಳಿಕೊಡುವ ಕೋರ್ಸ್‍ಗಳು ವೇಸ್ಟ್ ಎನ್ನುತ್ತಿಲ್ಲ.ಜ್ಞಾನ ಯಾವತ್ತು  ನಿಷ್‌ಪ್ರಯೋಜಕವಾಗುವುದಿಲ್ಲ, ಎಂದೆಂದಿಗೂ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತಿಲ್ಲ!!

ಎಲ್ಲಿ ಕೋರ್ಸ್ ಮಾಡುತ್ತೀರಾ, ಯಾವ ಮಟ್ಟದ ಕೋರ್ಸ್ ಮಾಡುತ್ತೀರಾ ಎನ್ನುವುದು ಅವಶ್ಯಕ.
ಉದಾಹರಣೆಗೆ :- ಒಂದು ಖಾಲಿ ಹುದ್ದೆಗೆ ಕನಿಷ್ಟ ಅರ್ಹತೆ ೯೦% ಇದೆ ಎಂದುಕೊಳ್ಳೊಣ ಎಲ್ಲಾ ವೃತ್ತಿ ಜಾತಕಗಳು ಪರಿಷ್ಕರಣೆಗೊಂಡು ಕೊನೆಗೆ ೧೦ ಅಭ್ಯರ್ಥಿಗಳು ಆಯ್ಕೆ  ಆಗುತ್ತಾರೆ. ಹತ್ತಕ್ಕೆ ಹತ್ತೂ ಜನ ಸರಿಯಾಗಿ ೯೦% ಇರುವ ಅಭ್ಯರ್ಥಿಗಳು ಅಂದುಕೊಳ್ಳೋಣ, ಇವರಲ್ಲಿ ಆಯ್ಕೆ ಮಾಡಬೇಕೆಂದರೆ ಒಂದು ಸುತ್ತಿನ ಪರಿಷ್ಕರಣೆ ಆದಾಗ  ಯಾರಿಗೆ ಹೆಚ್ಚಿನ ನಿಪುಣತೆ(ಸ್ಕಿಲ್ಲ್ ಸೆಟ್) ಇದೆ ಅಂತ ನೊಡುತ್ತಾರೆ ಅದರಲ್ಲಿ   ಸಿ - ೪ ಜನ, ಸಿ,ಸಿ++ -೩ ಜನ, ಸಿ,ಸಿ++,ಜಾವ - ೩ ಜನ ತಿಳಿದವರಾಗಿದ್ದರೆ ನಿಮ್ಮ ಊಹೆಯ ಪ್ರಕಾರ ಯಾರನ್ನು ಕರೆಯಬಹುದು?? ಇಂಟರ್ವ್ಯೂವ್ ಮಾಡುವವರು ಅವರ ಕೆಲಸ ಸುಲಭ ಮಾಡಿಕೊಳ್ಳಲು ನೋಡುತ್ತಾರೆಯೊ ಹೊರತು ಮೊದಲಿಗೇನೆ ನಿಮ್ಮ ಜ್ಞಾನವನ್ನು ಓರೆಗೆ ಹಚ್ಚಿ ಆಯ್ಕೆ ಮಾಡಲು ನಿಂತಿರುವುದಿಲ್ಲ. ಹಾಗಾಗಿ ಕೊನೆಗೆ ಸಿ,ಸಿ++,ಜಾವ ತಿಳಿದ ೩ ಜನ ಆಯ್ಕೆ ಆಗುತ್ತಾರೆ ಅಲ್ಲಿಗೆ ೯೦% ತೆಗೆದು ಸಿ,ಸಿ++ ತಿಳಿದ ಸುಮಾರು ೭ ಜನರ ಅವಕಾಶ ತಪ್ಪಿತಲ್ಲವಾ? ಅವರಿಗೆ ನಿಜವಾಗಲು ಎಷ್ಟು ಟ್ಯಾಲೆಂಟ್ ಇದ್ದರೆ ಏನು ಪ್ರಯೊಜನವಾದಂತಾಯಿತು? ಇನ್ನು ಆಯ್ಕೆ ಆದ  ೩ ಜನರಲ್ಲಿ ಯಾರು ಎಂತಹ ಪ್ರಾಜೆಕ್ಟ್ ಮಾಡಿದ್ದಾರೆ ಎನ್ನುವುದನ್ನು ನೋಡಿ ಪರಿಷ್ಕರಣೆ  ಮಾಡಿ ಒಬ್ಬನ್ನ(ಳ)ನ್ನು ರಿಜೆಕ್ಟ್ ಮಾಡಿದರೆ, ಒಳ್ಳೆಯ ಸಂಸ್ಥೆಯಲ್ಲಿ ಸಾವಿರಾರುಗಟ್ಟಲೆ ದುಡ್ಡುಕೊಟ್ಟು ಕೋರ್ಸ್
ಮಾಡಿ ಕಳಪೆ ಪ್ರಾಜೆಕ್ಟ್ ಮಾಡಿದರೆ ಏನು ಬಂತು ಪ್ರಯೋಜನ? ಕೊನೆಗೂ ಅವಕಾಶ ತಪ್ಪಿತಲ್ಲವಾ? ಇನ್ನು ಕೊನೆಯ ಸುತ್ತಿಗೆ ಆಯ್ಕೆಯಾದ ಇಬ್ಬರಲ್ಲಿ ಒಂದೆ ಸಮನಾದ ಜ್ಞಾನವಿದ್ದರೆ ಅವರು ಇಂಟರ್ವ್ಯೂವ್ ಅಲ್ಲಿ ಹೇಗೆ ಉತ್ತರಿಸಿದರು ಯಾವ ರೀತಿಯ ಜಾಣ್ಮೆಯಿಂದ ಉದಾಹರಣೆ ಕೊಟ್ಟು ಉತ್ತರಿಸಿದರು ಅನ್ನುವುದರ ಮೇಲೆ ಹೋಗುತ್ತದೆ.

ಮೇಲಿನ ಉದಾಹರಣೆ ಕೇವಲ ನನ್ನ ಉತ್ಪ್ರೇಕ್ಷೆ ಅಷ್ಟೆ ಆದರೆ ಅಷ್ಟೆ ಸಾಧ್ಯವು ಸಹ ಇದೆ. ಯೋಚಿಸಿ ೧೦ ಹುದ್ದೆಗೆ ೫೦೦ ಫ್ರೆಷರ್ ಅರ್ಜಿಗಳು ಬಂದರೆ ಈ ರೀತಿಯಾಗಿ ಪರಿಷ್ಕರಿಸುವುದಿಲ್ಲ ಅಂತ ಯಾವ ಗ್ಯಾರಂಟಿ ಇದೆ?    
    ಕೆಲಸ ಹೇಗೆ ಗಿಟ್ಟಿಸುತ್ತೀರಾ ಎನ್ನುವುದು ಮುಖ್ಯವಲ್ಲ!! ನಿಮ್ಮಲ್ಲಿ "stuff" ಇರಬೇಕು, ಆಗಲೆ ನಿಮಗೆ ಮರ್ಯಾದೆ ಇಲ್ಲವಾದರೆ ನಾಯಿಯ ಕುನ್ನಿ ತರಹ ನಿಮ್ಮ ಬಾಳಾಗುತ್ತದೆ. ಎಲ್ಲ ಕಂಪನಿಗಳಲ್ಲೂ ಕಿತ್ತು ತಿನ್ನುವಂತಹ ತೋಳಗಳಿರುತ್ತವೆ ಅವುಗಳ ಜೊತೆ ಹೊಂದಿಕೊಂಡು (ಹೊಂದಿಕೊಳ್ಳದೆ ವಿಧಿಯಿಲ್ಲ) ಮರ್ಯಾದೆ ಗಿಟ್ಟಿಸಬೇಕೆಂದರೆ ಕುನ್ನಿಯ ತರಹ ಬದುಕಲು ಸಾಧವಿಲ್ಲ.
ತೋಳಗಳನ್ನು ಹೆದರಿಸುವಂತಹ ಸಿಂಹವಾಗಬೇಕು, ಸಿಂಹವಾಗಬೇಕು ಅಂದರೆ ನಮ್ಮ ಹತ್ತಿರ ಅತೀ ಸೂಕ್ಷ್ಮ ವಿಚಾರಗಳ ಮಟ್ಟಿಗೆ ಸಹ ಜ್ಞಾನವಿರಬೇಕು. ಇಲ್ಲವೆಂದರೆ ಕನಿಷ್ತ "ಗಾಡ್ಸ್ ಮಸ್ಟ್ ಬಿ ಕ್ರೆಝಿ" ಎಂಬ ಚಿತ್ರದಲ್ಲಿ ಪುಟ್ಟ ಹುಡುಗ ತೋಳಕ್ಕಿಂತ ಎತ್ತರವಿರುವಂತೆ ಭಾವನೆ ಬರಿಸಲು ಮರದ ಚಕ್ಕೆ ತಲೆಮೆಲೆ ಹಿಡಿದು ತೋಳ ಹೆದರಲು ಭಾವನೆ ಮೂಡಿಸುವಂತೆ ನೀವು ಸಹ ನಿಮ್ಮ ಹತ್ತಿರ ಜ್ಞಾನವಿದೆಯೆಂಬಂತೆ ಕನಿಷ್ಟ ಬಿಲ್ಡ್‌ಅಪ್ ಆದ್ರು ಕೊಡಬೇಕು. ಎರಡನೆ ದಾರಿಗೆ ಹೋಲಿಸಿದರೆ ಮೊದಲನೆ ದಾರಿಯೆ ಸುಲಭ ಹಾಗು ಸರಿಯಾದುದು.

 ಈ ಮೂರನೆಯ ಸಾಧನವೆ ಜ್ಞಾನ, ಈಗ ಎಲ್ಲವನ್ನು ಕೂಡಿಸಿದರೆ ನಮ್ಮ ಹತ್ತಿರ ವಿನಮ್ರ ಭಾವನೆ ಇದೆ,ಒಳ್ಳೆಯ ವೃತ್ತಿಯ ಜಾತಕವಿದೆ,ಅಗತ್ಯ ಜ್ಞಾನವಿದೆ. ಇಷ್ಟಿದ್ದ ಮಾತ್ರಕ್ಕೆ ನಿಮಗೆ ಕೆಲಸ ಸಿಗುವ ಹಾಗಿದ್ದರೆ ನೀವು ಈ ಬ್ಲಾಗ್ ಪೋಸ್ಟ್ ಆನು ಇಲ್ಲಿಯವರೆಗು ಮಾರ್ಗದರ್ಶನಕ್ಕಾಗಿ ಓದಿಕೊಂಡು ಬರುತ್ತಲೆ ಇರಲಿಲ್ಲ ಅಲ್ವಾ? ಹಾಗಾದರೆ ಇನ್ನು ಚರ್ಚೆ ಮಾಡದಿರೊ ಅದು ಯಾವ ಸಾಧನ ಬೇಕು ನಿಮಗೆ ಕೆಲಸ ಖಂಡಿತವಾಗಿಯು ಸಿಗಲೆ ಬೇಕು ಅನ್ನೊಕ್ಕೆ?

ಮುಂದುವರೆಯುವುದು..

--ಪ್ರಸಾದ್

Tuesday, November 5, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೧


ಲಿಂಕ್ಡ್-ಇನ್.ಕಾಂ
ಹಲವರು ಕೇಳಿರ್ತೀರಾ,ಕೆಲವರು ಸೇರಿರ್ತೀರಾ.
ಕೇಳಿದ್ರು ಆಸಕ್ತಿ ತೋರ್ಸಿರಲ್ಲ,ಸೇರಿದ್ರು ಅದನ್ನ ಸಂಪೂರ್ಣವಾಗಿ ಉಪಯೋಗಿಸಿರಲ್ಲ!!
ಒಟ್ನಲ್ಲಿ ನಂ ಕನ್ನಡಿಗರು ಉದ್ಧಾರ ಆಗ್ತಿಲ್ಲ :( (on an average)

 ಹೆಚ್ಚಾಗಿ ನಮ್ಮ ಕನ್ನಡಿಗರ ಬಾಳು ಹೀಗೆ ಆಗ್ತಿರೊದು ದುಖ:ಕರ ಸಂಗತಿ.
ಇದನ್ನ ಬದಲಿಸಬೇಕು ಅಂದರೆ ನಮಗೆ ಅನುಕೂಲಕರ ವಾತರವರಣ ಸೃಷ್ಟಿ ಆಗಬೇಕು.
ಸೃಷ್ಟಿ ಆಗಬೇಕು ಅಂದ್ರೆ ನಮಗೆ ಯಾರೊ ಮಾಡಿಕೊಡೊಕ್ಕೆ ಆಗಲ್ಲ,ಮಾಡಿಕೊಟ್ರು ಅದು ಶಾಶ್ವತ ಇರಲ್ಲ!!
ಅದಕ್ಕೆ ನಮಗೆ ತಕ್ಕ ಅನುಕೂಲಕರ ವಾತವರಣ ನಾವೆ ಸೃಷ್ಟಿ ಮಾಡಿಕೊಳ್ಳಬೇಕು, ಆಗ ಮಾತ್ರ ನಾವು ಕನ್ನಡಿಗರು ಉದ್ಧಾರ ಆಗೊಕ್ಕೆ ಸಾಧ್ಯ.
         ಒಂದು ನಟ್ ತೆಗಿಬೇಕು ಆಂದರೆ ಸ್ಕ್ರೂ ಡ್ರೈವರ್ ಅಥವಾ ಸ್ಪಾನೆರ್ ಎಂಬ ಸಾಧನ ಬೇಕೊ ಹಾಗೆ ನಮ್ಮ ವೃತ್ತಿಜೀವನ ಬದಲಾಗಬೇಕು ಅಂದರೆ ಅದಕ್ಕೆ ತಕ್ಕ ಅನುಕೂಲಕರ ಸಾಧನಗಳನ್ನು ಉಪಯೋಗಿಸಬೇಕು. ಹೀಗಿದ್ದ ಮೇಲೆ ನಮ್ಮ ವೃತ್ತಿ ಜೀವನದ ಅನುಕೂಲಕರ ಸಾಧನಗಳು ಯಾವುದಾವುದು?
 
           ಸಾಧನಗಳು ಯಾವುದು ಅಂತ ಹುಡುಕೊ ಮುಂಚೆ, "ಏನನ್ನು"ರಿಪೇರಿ ಮಾಡಲು "ಏನು"ಬೇಕು ಅನ್ನೊದೆ ಮೂಲ ಪ್ರಶ್ನೆ. ಇದು ಗೊತ್ತಾದ್ ಮೇಲೆ ಅದನ್ನ "ಹೇಗೆ"ಸಾಧಿಸುತ್ತೇವೆ ಅನ್ನೊದೆ ಯಕ್ಷ ಪ್ರಶ್ನೆ.

 "ಏನನ್ನು" ಅನ್ನೊದು ಇಲ್ಲಿ "ವೃತ್ತಿ ಜೀವನ" ಅಂತ ಪರಿಗಣಿಸಿ ಮುಂದೆ ಸಾಗೋಣ.

ಕೈಲಿ ಸರ್ಟಿಫಿಕೇಟ್ ಇದೆ,ಸಾಧಿಸಬೇಕು ಅನ್ನೊ ಹಂಬಲ ಇದೆ ಅಲ್ವಾ?
ಕೇವಲ ಹಂಬಲ/ಆಸೆ ಇದ್ರೆ ಸಾಕಾ?? ಮುಖ್ಯವಾಗಿ ಛಲ ಇರಬೇಕು. ಛಲ ಇದ್ದಾಗಲೆ "ಏನನ್ನು"ಸಾಧಿಸುವುದಕ್ಕೆ "ಏನೆಲ್ಲಾ"ಮಾಡಬೇಕೊ ಅವುಗಳ ದಾರಿ ಕಂದು ಹಿಡಿಯಲು ಪ್ರಯತ್ನಿಸುತ್ತೇವೆ. ಈ ಲೇಖನ ಓದುತ್ತಿರುವುದೆ ನಿಮ್ಮ ತುಡಿತಕ್ಕೆ ಸಾಕ್ಷಿ.

            "ವೃತ್ತಿ ಜೀವನ"ಸುಧಾರಿಸಲು ಅಥವಾ ದಾರಿಗೆ ತರಲು ನಾವು ಸದಾ ಪ್ರಯತ್ನಿಸುತ್ತಿರಬೇಕಾಗುತ್ತದೆ. ನಮ್ಮ ಆಚಾರ ವಿಚಾರಗಳನ್ನು ಸುಧಾರಿಸಬೇಕಾಗುತ್ತದೆ,ಹಳೆಯ ನೀರುನ್ನು ಹರಿಯಲು ಬಿಟ್ಟು ಹೊಸ ನೀರು ನಮ್ಮ ಆಲೊಚನಾ ಕೊಳದಲ್ಲಿ ತುಂಬಬೇಕಾಗುತ್ತದೆ. ಯಾವಾಗ ಮೌಢ್ಯ(ತಿಳುವಳಿಕೆ ಇಲ್ಲದಿರುವುದು), ಅಹಂಕಾರ ಎನ್ನುವುದು ತಲೆಯಲ್ಲಿ ತುಂಬಿರುತ್ತದೆಯೊ ಅಲ್ಲಿಯವರೆಗು ನಮ್ಮ ಜ್ಞಾನದ ಕೊಳದೊಳಗೆ ಹೊಸ ನೀರು ತುಂಬಲು ಆಗುವುದಿಲ್ಲ.
       
            ಈ ಮಾತು ಯಾಕೆ ಬಂತು ಅಂದರೆ ಕನ್ನಡಿಗರಿಗೆ ಸಹಾಯ ಆಗಲಿ ಅಂತಾನೆ ಹಲವಾರು ಕನ್ನಡಿಗರು ತಮ್ಮ ನಿತ್ಯ ಜೀವನದಲ್ಲಿ ಸಮಯವನ್ನು ಮುಡಿಪಾಗಿಟ್ಟು ಇತರ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ನೀಡುತ್ತಾರೆ. ಆದರೆ ಸಹಾಯ ಕೇಳಿ ಬಂದ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ಸಿಕ್ಕ ಮೇಲೆ ಧನ್ಯವಾದ ತಿಳಿಸಬೇಕೆಂಬ ಕನಿಷ್ಟ ಸೌಜನ್ಯ ಇಲ್ಲದಿರುವುದು ಅವರವರ ದುಸ್ಥಿತಿಗೆ ಕಾರಣ.ಮಾರ್ಗದರ್ಶಕರ ಉತ್ಸಾಹವನ್ನು ಬೇಕಾಬಿಟ್ಟಿಯಾಗಿ ತಿಳಿಯುವರಿಗೆ ಮತ್ತೊಮ್ಮೆ ಸಹಾಯ ಮಾಡಲು ಯಾರು ಬರುತ್ತಾರೆ? ಇದರಿಂದ ಇತರರಿಗೂ ನಷ್ಟವಾಗುತ್ತದೆ. ವಿನಮ್ರತೆ/ಸೌಜನ್ಯತೆ ಅನ್ನುವುದು ಕಲಿಯಲು ಇತರರೊಂದಿಗೆ ಬೆರೆಯಲು ಬೇಕಾಗಿರುವಂತಹ ಅತ್ಯಂತ ಮುಖ್ಯವಾದ ಸಾಧನ. ಈ ಮೊದಲ ಸಾಧನ ಇಟ್ಟುಕೊಂಡರೆ ನೀವು ಸಹಾಯ ಯಾಚಿಸಿದಾಗಲೆಲ್ಲ ಸಹಾಯ ಸಿಗುತ್ತದೆ.

                 ನೀವು ವಿನಮ್ರ ಭಾವದ ಕನ್ನಡಿಗರು ಅನ್ನುವ ಏಕೈಕ ಕಾರಣಕ್ಕೆ ನಿಮಗೆ ಕೆಲಸ ಕೊಡಲು ಆಗುತ್ತದೆಯೆ? ಸಾಧ್ಯವಿಲ್ಲ!! ಹಾಗಾಗಿ ನಿಮಗೆ ಬೇಕಾಗಿರುವ ಎರಡನೆಯ ಸಾಧನ ನಿಮ್ಮ ಗುರಿ,ಜ್ಞಾನ,ಜಾಣ್ಮೆ,ಸಾಧನೆಗಳನ್ನು ಪ್ರತಿಬಿಂಬಿಸುವ ರೆಸ್ಯುಮೆ/ವೃತ್ತಿ ಜಾತಕ(curriculum vitae) ಅಗತ್ಯ.ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮುಂಚೆ ಬರೆದಿದ್ದೇನೆ.

             ವೃತ್ತಿ ಜಾತಕವು ನಿಮ್ಮ ಪ್ರತಿಬಿಂಬವೆಂದೆ ತಿಳಿಯಿರಿ, ಎಲ್ಲಾ ಕಡೆಯಲ್ಲಿ ನೀವಿದ್ದುಕೊಂಡು ನಿಮ್ಮ ಗುಣಗಾನ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿಯೆ ನಿಮ್ಮ ಪರವಾಗಿ ನಿಮ್ಮ ಜಾಣ್ಮೆ,ಸಾಧನೆಯ ಬಗ್ಗೆ ನಿಮ್ಮ ವೃತ್ತಿ ಜಾತಕವು ಮಾತಾಡಬೇಕು. ವೃತ್ತಿ ಜಾತಕವನ್ನು ಹಗುರವಾಗಿ ಪರಿಗಣಿಸಿದರೆ ನಿಮ್ಮನ್ನು ಸಹ HR ಅಷ್ಟೆ ಹಗುರಾಗಿ ಪರಿಗಣಿಸಿ ನಿಮ್ಮನ್ನು ಅವಕಾಶವಂಚಿತರಾಗುವಂತೆ ಮಾಡಬಹುದು.
ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮತ್ತೊಮ್ಮೆ ಓದಿ ಇಲ್ಲಿಂದ ಮುಂದೆ ಓದಿರಿ.

              ಈಗ ಎರಡನೆಯ ಸಾಧನವನ್ನು ನೀವು ನಿಮ್ಮ ಬತ್ತಳಿಕೆಯಲ್ಲಿ ಇಟ್ಟಿಕೊಂಡಿರಲ್ಲವೆ?
ನೀವು ಈಗ ವಿನಮ್ರಭಾವದ + ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಾಯಿತಲ್ಲವೆ ಇಷ್ಟಕ್ಕೆ ನಿಮಗೆ ಕೆಲಸ ಸಿಗುತ್ತದೆಯೆ? ಯೋಚಿಸಿ

ಉಹು, ದೇವರು ವರ ಕೊಟ್ಟರು ಪೂಜಾರಿ ವರ ಕೊಡಲ್ಲ ಎನ್ನುವ ಹಾಗೆ ಆಗಬಾರದು ಹಾಗಿದ್ದರೆ ಏನು ಮಾಡಬಹುದು?

ಯೋಚಿಸಿ, ನನ್ನೊಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ

--ಪ್ರಸಾದ್
 (ಮುಂದುವರೆಯುವುದು..)